Wednesday, April 15, 2009

ಆದರ್ಶಗಳ ಕೊಲೆ!

ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಆದದ್ದೇ ಬೇರೆ! ರೆಜಿಸ್ಟರ್ ಮ್ಯಾರೇಜ್ ಆಗ್ಲಿಲ್ಲಾ. ಒಳ್ಳೆ ಅದ್ಧೂರಿಯಾಗಿ ಮದುವೆಯಾಯ್ತು. ಅಂದುಕೊಂಡದ್ದಕ್ಕಿಂತ ಜಾಸ್ತಿ ಖರ್ಚು ಆಯ್ತು! ಅದಕ್ಕೆಲ್ಲಾ ಕಾರಣಗಳು ಇದ್ವು ಅಥವ ಅದಕ್ಕೆ ನಾನೇ ಕಾರಣ ಹುಡುಕಿದ್ದಿರಬೆಕು. ಆದರೆ ಒಂದು ಮಾತ್ರಾ ನಿಜ ಏನೇ ಆದರ್ಶಗಳನ್ನು ಇಟ್ಟುಕೊಂಡ್ರೂ ಅದನ್ನು ಪಾಲಿಸೋ ಜನ ತುಂಬಾ ಕಡಿಮೆ. ಯಾಕೆ ಹೀಗಾಗುತ್ತೆ ಅಂತ? ಪರಿಸ್ಥಿತಿ ಹಾಗೆ ಬರುತ್ತೆಯೆ? ಅಥವಾ ಸಮಾಜದಲ್ಲಿದ್ದು ಬೇರೆ ರೀತಿಯಲ್ಲಿ ಯೋಚನೆ ಮಾಡೊಕೆ ಭಯವೆ?ಮಕ್ಕಳೆ ಬೇಡ ಅಂತೀವಿ. ಯಾವುದಾದರು ಅನಾಥ ಮಗುವನ್ನು ದತ್ತು ತೊಗೊಂಡು ಸಾಕ್ತಿನಿ ಅಂತೀವಿ! ಆದರೆ ಗೆಳೆಯನೊಬ್ಬ ಅಪ್ಪ ಆಗ್ತಿರೊ ವಿಷಯ ಕೇಳಿ ಅಸೂಯೆಯಿಂದ ಕರುಬಿ ನಾನು ಅಪ್ಪ ಆಗ್ಲೇಬೇಕು ಅನ್ನೊ ಹಠ ತೊಡ್ತಿವಿ. ಯಾಕೆಂದರೆ ಸಮಾಜಕ್ಕೆ ತಾನು ಗಂಡಸು ಅನ್ನೊದನ್ನ ಪ್ರಮಾಣಿಸಿ ತೋರಿಸಬೆಕಲ್ಲಾ. ಇಲ್ಲದಿದ್ರೆ, ಮಿತ್ರರು, ಸಂಬಂಧಿಗಳು ಆಡೊ ಕುಹಕದ ಮಾತು ಸಹಿಸಬೇಕು! ನನ್ನ ಗೆಳೆಯನೊಬ್ಬನಿಗೆ ಅಪ್ಪನಾಗೊ ಸಡಗರ ಒದಗಿ ಬಂತು. ಆತ ನನಗೆ ಫೋನ್ ಮಾಡಿದಾಗಲೆಲ್ಲ ಕೇಳೋನು "ನಿಮ್ದು ಯಾವಾಗರಿ ಸುದ್ದಿ ? ಏನೂ ವಿಶೇಷ ಇಲ್ಲೇನು", ಅರೇ ಇದಾವ ಲೆಕ್ಕ? ಅವನದು ವಿಶೇಷ ಆಗಿದ್ದೆ ತಡ, ಹಿಂಗಾಡೊದಾ? ಹಿಂಗಾದಾಗ ಮೊದಲು ಒಂದು ಮಗು ಆಗ್ಲಿ ಆಮೇಲೆ ನೋಡಿದ್ರಾಯ್ತು ಅಂತ ಶುರು ಹಚ್ಕೋತೀವಿ. ಇದೆ ಅಲ್ವೆ ಆದರ್ಶಗಳ ಕೊಲೆ?ಕಡಿಮೆ ಪಗಾರ ಬರ್ತಿದ್ದಾಗ, ಇದಕ್ಕಿಂತ ಇನ್ನೂ ಹತ್ತು ಸಾವಿರ ಜಾಸ್ತಿಯಾದ್ರೂ ಸರಿ ಸಮಾಜ ಸೇವೆ ಮಾಡೇ ತೀರುವೆ ಅಂತ ಶಪಥ ಮಾಡ್ತೀವಿ. ಹತ್ತು ಸಾವಿರ ಜಾಸ್ತಿ ಆಗುತ್ತೆ ಆದ್ರೆ ಅದಕ್ಕೆ ತಕ್ಕ ಹಾಗೆ ಬೇರೆ ಖಯಾಲಿಗಳು ಬೆಳೆದಿರುತ್ತವೆ. ಶಪಥ ಮರೆತು ಹೋಗಿರುತ್ತದೆ!ಮೇಲಿನ ಎಲ್ಲ ಉದಾಹರಣೆಗಳಲ್ಲಿ ಸಾಮಾನ್ಯವಾದುದೆಂದರೆ, ನಮ್ಮ ಸುತ್ತಲಿರುವವರ ಪ್ರಭಾವ, ಅವರು ಯಾರೇ ಆಗಿರಬಹುದು. ಅಪ್ಪ, ಅಮ್ಮಾ, ಬಂಧು ಅಥವಾ ಗೆಳೆಯಾ. ರೆಜಿಸ್ಟರ್ ಮದುವೆ ಆಗ್ತೀನಿ ಅಂದಾಗ ಅಪ್ಪ ಅಂತಾನೆ "ನೀನು ಹಿಂಗೆಲ್ಲಾ ಅಂದ್ರ ಹೆಂಗ? ನಮ್ಮ ಮನಿತನಕ್ಕ ತಕ್ಕಂಗ ಲಗ್ನಾ ಆಗ್ಬೇಕು. ಇಲ್ಲಾ ಅಂದ್ರ ಎಲ್ಲಾರು ಎನು ತಿಳ್ಕೋತಾರ?" "ಇದ್ದೊಬ್ಬ ಮಗಂದು ಲಗ್ನಾ ಚೆಂದಾಗಿ ನೋಡೂದು ನನ್ನ ನಸೀಬದಾಗ ಇಲ್ಲಾ ಅಂತ ಕಾಣ್ತದ" ಅಂತ ಅಮ್ಮ ಕಣ್ಣೀರು ಹಾಕ್ತಾಳೆ. ಇದನ್ನೆಲ್ಲ ವಿರೋಧಿಸಿ ತಮ್ಮ ಆದರ್ಶ ಮೆರೆಯುವವರೂ ಇದ್ದಾರೆ. ಆದರೆ ಅವರ ಭಾವನೆಗಳಿಗೆ ಸ್ಪಂಧಿಸಿ ತಮ್ಮ ಆದರ್ಶಗಳನ್ನು ಕೊಲೆ ಮಾಡುವವರೂ ಇನೂ ಜಾಸ್ತಿ ಇದ್ದಾರೆ. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಯಾವುದು ಸರಿ, ಯಾವುದು ತಪ್ಪು ಅಂತ ಮನಸ್ಸು ಯೋಚಿಸಲು ತೊಡಗುತ್ತದೆ...ಆದರ್ಶಗಳನ್ನು ಪಾಲಿಸಿದರೆ ಬೇರೆಯವರಿಗೆ ಬೇಜಾರು, ಪಾಲಿಸದಿದ್ದರೆ ತನ್ನ ಮನಸ್ಸಾಕ್ಷಿಗೆ ದ್ರೋಹ ಬಗೆದಂತೆ! ಇದಕ್ಕೆ ಪರಿಹಾರವೇನು?

Tuesday, April 7, 2009

ನನ್ನ ಮನದಂಗಳದಲಿ ಸಾಹಿತ್ಯದ ಬೀಜ ಬಿತ್ತಿದವರು...

ಒಂದು ಪ್ರಶ್ನೆ ಯಾವಾಗಲೂ ದಿಗಿಲು ಹುಟ್ಟಿಸುತ್ತದೆ! ಯಾರಾದರೂ ಹೊಸಬರು ನಿಮ್ಮ ಊರು ಯಾವ್ದು? ಅಂತ ಕೇಳಿದಾಗ! ಯಾಕಂದ್ರೆ, ನಮ್ಮ ಬೇರುಗಳು ಇರೋದು ಕುರ್ತಕೋಟಿಯಲ್ಲಿ. ನಾನು ಹುಟ್ಟಿದ್ದು ಗದಗದಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರದಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದು ಧಾರವಾಡ ಹಾಗೂ ಬಾಗಲಕೋಟೆಯಲ್ಲಿ. ಸಧ್ಯದ ವಾಸ್ತವ್ಯ ಬೆಂಗಳೂರಲ್ಲಿ! ಹೀಗೆ, ನನ್ನದು ಯಾವ ಊರು ಅನ್ನೋ ದ್ವಂದ್ವ ನನ್ನದು, ಇರಲಿ.

ನಾನು ಯಾರಿಗಾದರೂ, ನನ್ನ ಕುರ್ತಕೋಟಿ ಬೇರುಗಳ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೆ, ಒಂದು ಪ್ರಶ್ನೆಯನ್ನು ನಿರೀಕ್ಷಿಸುತ್ತೇನೆ "ಅರೇ, ಕೀರ್ತಿನಾಥ ಕುರ್ತಕೋಟಿ ಅವರು ನಿನಗೆ ಸಂಬಂಧಾನಾ?" ಈ ಪ್ರಶ್ನೆ ನನಗೆ ಯಾವಾಗಲೂ ಖುಷಿ ಕೊಡುತ್ತೆ. ಹೌದು, ಅವರು ನನ್ನ ಸ್ವಂತ ದೊಡ್ಡಪ್ಪ! ಅಥವ ಅವರ ಖಾಸ್ ತಮ್ಮನ (ಶಶಿಕಾಂತ ಕುರ್ತಕೋಟಿ) ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಅವರ ಬಗ್ಗೆ ವಿವರವಾಗಿ ಬರೆಯುವಷ್ಟು ಪ್ರತಿಭೆ ಅಥವ ತಾಕತ್ತು ಎರಡೂ ನನ್ನಲ್ಲಿ ಇಲ್ಲ ಬಿಡಿ. ಅವರು ಕನ್ನಡದ ಅತೀ ಶ್ರೇಷ್ಠ ವಿಮರ್ಶಕರಲ್ಲೊಬ್ಬರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಾನು ಅವರ ಜೊತೆ ಕಳೆದ ಕೆಲವು ಅಮೂಲ್ಯ ಕ್ಷಣಗಳ ಬಗ್ಗೆ ಬರೆಯಲು ನನಗೆ ಖುಷಿ. ನಾವು ಧಾರವಾಡದಲ್ಲಿ ಇದ್ದಾಗ, ದೊಡ್ಡಪ್ಪನ ಮನೆಗೆ ಆಗಾಗ ಹೋಗುತ್ತಿದ್ದೆ. ದೊಡ್ಡಪ್ಪನನ್ನು ಏಕವಚನದಲ್ಲಿ ಕರಿಯುತ್ತಿದೆ ಅನ್ನೋದು ನನಗೆ ಒಂಥರ ಪ್ರತಿಷ್ಠೆಯ ಸಂಗತಿ!. ನಾನು ಹೋದಾಗಲೆಲ್ಲ ಅವರು ಏನೋ ಒಂದು ಬರೀತಾ ಕೂತಿರೋರು ಅಥವ ಯಾರೋ ಸಾಹಿತ್ಯಾಸಕ್ತರ ಜೊತೆ ಹರಟೆ ಹೊಡಿತಾ ಕೂತಿರೋರು. ನನಗೆ ಅವರು ಒಬ್ಬರೇ ಸಿಗುವುದು ಅಪರೂಪ, ಅದರೆ ಸಿಕ್ಕರೇ ನನ್ನ ಅದೃಷ್ಟ. "ಏನೋ ಬರಿಲಿಖತ್ತಿಯಲ್ಲಪ್ಪಾ" ಅಂತ ಶುರು ಮಾಡುತ್ತಿದ್ದೆ (ಹಾಗೆ ಕೇಳುವಷ್ಟು ಸಲಗೆ ಅವರ ಮೇಲೆ ನನಗಿತ್ತು). ನಾನು ಅಷ್ಟು ಕೇಳುತ್ತಲೆ ಬಾಯಲ್ಲಿ ಸದಾ ಇರುವ ತಾಂಬೂಲವನ್ನು ಉಗಿದು ಬರುತ್ತಿದ್ದರು "ಯಾಕ್ಲೇ ಭಾಳ ದಿವ್ಸದ ಮ್ಯಾಲೆ ಬಂದ್ಯಲ್ಲ" ಅಂತ ಅಕ್ಕರೆಯಿಂದ ಕೇಳುತ್ತಿದ್ದರು. ಅಲ್ಲಿಗೆ ನಮ್ಮ ಸಂಭಾಷಣೆ ಶುರು! ಅವರಿಗೆ ಹರಟೆ ಪ್ರಿಯ ಅನ್ನುವ ಅವರ ದುರ್ಬಲತೆಯನ್ನು (?) ನಾನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೆ. ವಿಧ ವಿಧವಾದ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ರಾಜಕೀಯದಿಂದ ಹಿಡಿದು ಕುಮಾರವ್ಯಾಸನ ವರೆಗೂ. ಅವರು ನಿಜಕ್ಕು ಒಬ್ಬ ಓಡಾಡುವ ಅಥವ ಮಾತನಾಡುವ ನಿಘಂಟು ಅಂದ್ರೆ ತಪ್ಪಾಗಲಾರದು. ಅವರು ಒಮ್ಮೆ ಹೇಳಿದ್ದು ನೆನಪಿದೆ. ಕುಮಾರವ್ಯಾಸ (ಗದುಗಿನ ನಾರಾಣಪ್ಪ) ನಮ್ಮ, ಅಂದರೆ ಕುರ್ತಕೋಟಿ ಮನೆತನದವನಂತೆ! ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಅದಕ್ಕೆ ಇರಬೇಕು ನನ್ನ ದೊಡ್ಡಪ್ಪನ ಬಾಯಲ್ಲಿ ಕುಮಾರವ್ಯಾಸ ಭಾರತ ಪೂರ್ತಿಯಗಿ ನಲಿದಾಡುತ್ತಿತ್ತು. ನಾನು ಎಷ್ಟೋ ಸಾರಿ ಅವರ ಜೊತೆ ಅವರ ಪ್ರವಚನಕ್ಕೆ ಹೋಗಿದ್ದಿದೆ. ಅಂದು ನನಗೆ ನಿಜಕ್ಕೂ ರಸದೌತಣ! ನಾನು ಆಗಾಗ ಮಯೂರ ಮತ್ತು ಕಸ್ತೂರಿಯಲ್ಲಿ ಕೆಲವು ಚಿಕ್ಕ ಪುಟ್ಟ ಲೇಖನ ಅಥವ ಚುಟುಕು ಬರೆಯುತ್ತಿದ್ದೆ. ಅವು ಪ್ರಕಟವಾದಾಗ ಅದನ್ನೊಯ್ದು ದೊಡ್ಡಪ್ಪನ ಮುಂದೆ ಹಿಡಿಯುತ್ತಿದ್ದೆ. ನನ್ನದು ಹುಂಬು ಧೈರ್ಯ! ಅಂಥ ದೊಡ್ಡ ವಿಮರ್ಶಕನೆದುರು ನನ್ನ ಪುಟಗೋಸಿ ಲೇಖನ ತೋರಿಸುವುದೆಂದರೆ ಹುಂಬ ಧೈರ್ಯವಲ್ಲದೆ ಮತ್ತೇನು?. ಒಂದು ಸಾರಿ ನಾನು ಉಪಯೋಗಿಸಿದ ಭಾಷೆ ಬಗ್ಗೆ ಸ್ವಲ್ಪ ತಕರಾರು ತಗೇದ ದೊಡ್ಡಪ್ಪ ನನ್ನನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಸ್ವಲ್ಪ ಮಟ್ಟಿಗೆ ಅದನ್ನು ತಿದ್ದಿಕೊಂಡು ಇನ್ನೊಂದು ಲೇಖನ ಬರೆದು ಅವರಿಂದ ಶಭಾಸ್ ಗಿರಿ ತೊಗೊಂಡ ಮೇಲೆಯೇ ನನಗೆ ಸಮಾಧಾನವಾಗಿದ್ದು! ನಂತರ ದೊಡ್ಡಪ್ಪ ವಿಧಿವಶವಾದರೂ, ಹೀಗೆ ಅವರ ಜೊತೆ ಕಳೆದ ಹಲವಾರು ನೆನಪುಗಳು ನನ್ನಲ್ಲಿ ಇನ್ನೂ ಜೀವಂತವಾಗಿವೆ...

ಇನ್ನು ನನ್ನ ಅಮ್ಮನ (ಪರಿಮಳ ಕುರ್ತಕೋಟಿ) ಬಗ್ಗೆ ಒಂದು ದೊಡ್ಡ ಪುಸ್ತಕ ಬರೆಯುವಷ್ಟು ನನ್ನ ಹತ್ರ ಸಾಮಗ್ರಿ ಇದೆ, ಒಂದು ದಿನ ಬರೆದೇನು ಎನ್ನುವ ಆತ್ಮ ವಿಶ್ವಾಸವು ಇದೆ. ನಾನ್ನಲ್ಲಿ ತುಂಬ ಪ್ರಭಾವವನ್ನು ಬೀರಿದ ಮೊದಲ ವ್ಯಕ್ತಿ ನನ್ನಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವಳದು ದೊಡ್ಡ ಸ್ಥಾನ. ಅವಳು ಪ್ರಭುದ್ಧ ಲೇಖಕಿ. ಅವಳು ಬರೆದ ಎಷ್ಟೋ ಲೇಖನಗಳು ಹಾಗು ಸಣ್ಣ ಕತೆಗಳು ನಾಡಿನ ಹಲವಾರು ಪ್ರಸಿದ್ಧ ಪತ್ರಿಕೆಗಳಾದ ತರಂಗ, ತುಷಾರ, ಸುಧಾ, ಮಯೂರ, ವನಿತಾ, ಮತ್ತು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಅವಳ ಸಣ್ಣ ಕತೆಗಳ ಸಂಗ್ರಹವಾದ "ತುಳಸಿ" ಪುಸ್ತಕವೂ ಬಿಡುಗಡೆಯಾಗಿದೆ. ಮೊದಲಿನಿಂದಲೂ ಅಮ್ಮ ನಾಸ್ತಿಕಳು. ಹಾಗು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಅವಳೆಂದೂ ಸಹಿಸುತ್ತಿರಲಿಲ್ಲ. ಇವೇ ಅವಳ ಕಥಾ ವಸ್ತುಗಳು ಕೂಡ ಆಗಿರುತ್ತಿದ್ದವು. ಆಗ ನಮ್ಮ ತಂದೆಗೆ ಲಕ್ಷ್ಮೇಶ್ವರದಲ್ಲಿ ಉದ್ಯೋಗ. ನನ್ನ ತಂದೆಯು ಅಮ್ಮನಿಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಲಕ್ಷ್ಮೇಶ್ವರ ಒಂದು ಐತಿಹಾಸಿಕ ಸ್ಥಳ (ಅದರ ಬಗ್ಗೆ ಮತ್ತೊಮ್ಮೆ ಬರೆದೇನು). ಆ ಊರಲ್ಲಿ ನನಗೆ ತಿಳಿದ ಮಟ್ಟಿಗೆ ಪ್ರಥಮ ಮಹಿಳಾ ಸಂಘವನ್ನು ನನ್ನಮ್ಮನೇ ಶುರು ಮಾಡಿದ್ದು. ಅಮ್ಮನ ಎಷ್ಟೋ ಬರಹಗಳು ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದವು. ನನಗೆ ಚೆನ್ನಾಗಿ ನೆನಪಿದೆ, ಒಂದು ಸಲ ಅವಳು ಬರೆದ ಲೇಖನ ಎಷ್ಟು ವಾರಗಳ ವರೆಗೆ ಚರ್ಚೆಯಾಯ್ತೆಂದರೆ, ಕೊನೆಗೆ ಸಂಪಾದಕರು ವಿನಂತಿ ಮಾಡಿಕೊಂಡು ಆ ಚರ್ಚೆಗೆ ಮಂಗಳ ಹಾಡಬೇಕಾಯಿತು! ಇಂಥ ಉದಾಹರಣೆಗಳು ಹಲವಾರು. ಈಗಿದ್ದಿದ್ದರೆ ಅವಳ ಎಷ್ಟು ಪುಸ್ತಕಗಳು ಪ್ರಕಟವಾಗಿರುತ್ತಿದ್ದವೋ ಏನೊ. ಅನಾರೋಗ್ಯದ ಕಾರಣ ಅವಳಿಗೆ ತನ್ನನ್ನು ತಾನು ಪೂರ್ತಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ತನ್ನ ೪೯ ನೆ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ನಡೆದುಬಿಟ್ಟಳು :( ...

ಅದೇ ಸಮಯದಲ್ಲಿ ನನ್ನಲ್ಲಿ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿಯೆಂದರೆ ನನ್ನ ಸೋದರ ಮಾವ. ಆತ ನನ್ನಮ್ಮನ ಖಾಸ್ ತಮ್ಮ. ಹೆಸರು ರಾಘವೇಂದ್ರ ಹುಯಿಲಗೋಳ. ಅತೀ ಚಿಕ್ಕ ವಯಸ್ಸಿನಲ್ಲೆ ೩೦ ರೇಡಿಯೊ ನಾಟಕಗಳನ್ನು ಆತ ಬರೆದಿದ್ದ. ಎಲ್ಲವೂ ಹಾಸ್ಯಮಯವೇ. ನನ್ನಲ್ಲಿ ಹಾಸ್ಯ ರಸವನ್ನು ತುಂಬಿದಾತ. ಅವನ ಜೊತೆ ಮಾತನಾಡುವುದೆ ಒಂದು ಮಜ! ಅವನ ಮಾತಿನಲ್ಲಿ ಅಷ್ಟು ಹಾಸ್ಯ ತುಂಬಿರುತ್ತಿತ್ತು.

ಇವರೆಲ್ಲರ ಪ್ರಭಾವದಿಂದಲೋ ಏನೊ ನಾನೂ ಕತೆ, ಕಾದಂಬರಿ ಓದಲು ಶುರು ಮಾಡಿದೆ. ನನಗೆ ತುಂಬ ಪ್ರೀಯವಾದ ಪುಸ್ತಕವೆಂದರೆ ಬೀಚಿ ಯವರ ಭಯಾಗ್ರಫಿ. ಓದುವುದರ ಜೊತೆಗೆ ಬರೆಯುವ ಗೀಳು ಹತ್ತಿತು. ಮೊದಮೊದಲು ನನ್ನ ಬರಹಗಳು ಸಣ್ಣ ಚುಟುಕುಗಳಿಗೆ ಸೀಮೀತವಾಗಿದ್ದವು. ಆಗ ಇನ್ನು ಹೊಸತು ನನ್ನದೊಂದು ನಗೆ ಹನಿ ಮಯೂರದಲ್ಲಿ ಪ್ರಕಟವಾಗಿತ್ತು. ನನಗೋ ಸಂಭ್ರಮ. ಗೆಳೆಯರಿಗೆಲ್ಲ ತೋರಿಸಿದೆ. ಬಹಳಷ್ಟು ಹುಡುಗರು ಮೆಚ್ಚುತ್ತಿದ್ದರು ಆದರೂ ಸಹಿಸಲಾರದವರೂ ಇರ್ತಾರಲ್ಲ? ಒಬ್ಬ ಕುಹಕವಾಡಿದ "ಕುರ್ತಕೋಟಿ ಅಂತ ನಿನ್ನ ಅಡ್ಡಹೆಸರು ನೋಡಿ ಪ್ರಕಟ ಮಾಡ್ತಾರ, ಇಲ್ಲ ಅಂದ್ರ ಕಷ್ಟ" ಅಂದ! ನನಗೆ ಇರಬಹುದೇ ಅಂತ ಸಂಶಯವಾಯ್ತು. ಕೂಡಲೇ ಮತ್ತೋಂದು ಲೇಖನ ರೆಡಿ ಮಾಡ್ದೆ. ಈ ಸಲ "ಪರಶುರಾಮ" ಅಂತ ಕಾವ್ಯ ನಾಮ ಇಟ್ಕೋಂಡು ಕಳಿಸಿದೆ. ಅದೂ ಪ್ರಕಟ ಆಯ್ತು. ಅದನ್ನು ನನ್ನ ಆ ಗೆಳೆಯನಿಗೆ ತೋರಿಸಲು ಮರೆಯಲಿಲ್ಲ. ಆತನ ಮುಖ ನೋಡುವಂಗಿತ್ತು. ಆದರೆ ಒಂದು ತಮಾಶೆಯಾಗಿತ್ತು. ನನ್ನ ಲೇಖನದ ಗೌರವಧನ ಮನಿ ಒರ್ಡರ್ ಮೂಲಕ ಬಂದಿತ್ತು. ನಾನಾಗ ಮನೆಲಿರಲಿಲ್ಲ. ಪೋಸ್ಟ್ ಮನ್, ನನ್ನ ತಂದೆಗೆ, ಪರಶುರಾಮ ಅನ್ನೋರು ಇದಾರಾ ಅಂತ ಕೇಳಿದ್ನಂತೆ. ಅಪ್ಪನಿಗೆ ತನ್ನ ಮಗ ಪರಶುರಾಮ ಆಗಿರೊ ಸಂಗತಿ ಗೊತ್ತಿರಲಿಲ್ಲವಾದರಿಂದ, ಆ ಹೆಸರಿನವರು ತಮ್ಮ ಮನೇಲಿ ಯಾರೂ ಇಲ್ಲ ಅಂತ ಅವನ್ನ ವಾಪಸ್ಸು ಕಳಿಸಿದ್ರಂತೆ! ಆಮೇಲೆ ಆ ಪೋಸ್ಟ್ ಮನ್ ಗೆ ತಿಳಿಸಿ ಹೇಳೊದ್ರಲ್ಲಿ ನನಗೆ ಸಾಕು ಬೇಕಾಗಿ ಹೋಯಿತು. ಆಮೇಲೆ ಎಂದೂ ನಾನು ಕಾವ್ಯನಾಮ ಇಟ್ಟುಕೊಳ್ಳುವ ಗೋಜಿಗೆ ಹೊಗಲಿಲ್ಲ ಬಿಡಿ! ಆಮೇಲೆ ಸಣ್ಣ ಲೇಖನ ಗಳನ್ನು ಬರೆಯಲು ಶುರು ಮಾಡಿದೆ. ಆದರೂ ನನಗೆ ತುಂಬ ಪ್ರಿಯವಾದ ಪ್ರಕಾರ ಎಂದ್ರೆ "ಹಾಸ್ಯ" ಸಧ್ಯಕ್ಕೆ ಹಾಸ್ಯ ಬರಹಗಳ ಕಡೆಗೆ ಒಲವು ಜಾಸ್ತಿ. ಈಗೆಲ್ಲ ನನ್ನ ಲೇಖನಗಳನ್ನ ಅಂತರ್ ಜಾಲದಲ್ಲೇ ಪ್ರಾಕಟಮಾಡ್ತೀನಿ. ಯಾಕಂದ್ರೆ ಇಲ್ಲಿ ನನ್ನ ಲೇಖನಗಳನ್ನು ಯಾರೂ ಕಸದಬುಟ್ಟಿಗೆ ಹಾಕುವುದಿಲ್ಲವೆಂಬ ವಿಶ್ವಾಸ :). ನಂತರ ವೃತ್ತಿಯಲ್ಲಿ ತೊಡಗಿಸಿಕೊಂಡ ಮೇಲೆ, ಸ್ವಲ್ಪ ಮಟ್ಟಿಗೆ ನನ್ನ ಸಾಹಿತ್ಯ ಕೃಷಿ ನಿಂತು ಹೋಗಿತ್ತು. ಈ ನಡುವೆ ನನ್ನ ಬಾಸ್ (ಕೃಷ್ಣ ರಾಜ್) ನನಗೆ ತುಂಬಾ ಪ್ರೋತ್ಸಾಹಿಸಿ ಮತ್ತೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಅವರಿಗೆ ನನ್ನ ಚಿರಋಣಿ.

ಮುಂದೆ ಏನೇನೋ ಯೋಜನೆಗಳಿವೆ. ಅಮ್ಮನ ಅಪ್ರಕಟಿತ ಕಾದಂಬರಿ (ವಡ್ಡಾರಾಧನೆ) ಪ್ರಕಟಿಸಬೇಕು. ಅಮ್ಮನ ಕನಸಾದ ವೃಧ್ಧಾಶ್ರಮವೊಂದನ್ನು ನಡೆಸಬೇಕು. ಕುರ್ತಕೋಟಿ ವೆಬ್ ಸೈಟು, ಸಿಕ್ಕಾಪಟ್ಟೆ ಓದಬೇಕು ಮತ್ತು ಬರೀಬೇಕು, ಓಳ್ಳೆ ಸಿನಿಮಾವೊಂದು ನಿರ್ಮಿಸಬೇಕು... ಹೀಗೆ ಹಲವಾರು ಕನಸುಗಳು. ಎಲ್ಲವನ್ನೂ ಮಾಡುವ ಹಂಬಲವೇನೋ ಇದೆ, ಆದರೆ ಮಾಡೇ ತೀರುವೆನೆಂಬ ಛಲದ ಕೊರತೆ ಇದೆ ಏನೋ ಎನ್ನುವ ಸಂಶಯವೂ ಇದೆ. ನೋಡೋಣ ... ನಮಸ್ಕಾರ.

Sunday, March 8, 2009

ನಾಯಿ ಪಾಡು!

ನಾನು ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳುಂಟು, ಅದರಲ್ಲೊಂದು, "ನಾಯಿ" ಅನ್ನೊ ಅದ್ಭುತ ಪ್ರಾಣಿ! ಹೌದು ಬೆಳಿಗ್ಗೆ ಎಷ್ಟೋ ಜನ ತಮ್ಮ ನಾಯಿಗೋಸ್ಕರವೇ ಜಾಗಿಂಗ ಮಾಡ್ತಾರೆ. ಅವು ತಮ್ಮೆಜಮಾನರ ಜೊತೆ ಒಳ್ಳೆ ಠೀವಿಯಿಂದ ಬಾಲ ಅಲುಗಾಡಿಸಿಕೊಂಡು, ಕಂಬ, ಮರ-ಗಿಡಗಳಾದಿಗಳಡಿಯಲ್ಲಿ ವಿಶ್ರಮಿಸುತ್ತ ಸಂಬ್ರಮಿಸುವ ಪರಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ! ಯಾರಿಗೆ? ಅವುಗಳ ಯಜಮಾನರಿಗೆ, ನಮ್ಮಂಥ ಬಡಪಾಯಿಗಳಿಗಲ್ಲ! ಎಷ್ಟೋ ಜನ ತಮ್ಮ ನಾಯಿಗಳಿಗೆ ಕೊರಳ ಪಟ್ಟೀನೂ ಕಟ್ಟಿರುವುದಿಲ್ಲ. ಅವು ನಮ್ಮನ್ನು ನೋಡಿ ಹತ್ತಿರಕ್ಕೆ ಬಂದು, ಇಷ್ಟುದ್ದ ನಾಲಿಗೆ ತೋರಿಸುತ್ತ, ಮೂಸಿ ನೋಡುತ್ತಿದ್ದರೆ ನಮಗೆ ಹೃದಯ ಬಾಯಿಗೆ ಬಂದಿರುತ್ತದೆ. ಅಷ್ತರಲ್ಲೆ, ಅದ್ರ ಯಜಮಾನ ನಮ್ಮ ಮೇಲೆ ಕರುಣೆ ತೋರಿ, "ಹೇ ಟಾಮೀ, ಕಮಾನ್" ಅಂತ ಗದರಿಸುತ್ತಲೆ ತಡ ಆ ಅದ್ಭುತ ಪ್ರಾಣಿ ಚಂಗನೆ ಜಿಗಿದು ಅವರ ಬಳಿ ವಾಪಸ್ಸಾಗುತ್ತೆ. ಹಾಗೆಯೆ ನಮ್ಮ ಹ್ರುದಯದ ಬಡಿತವೂ ವಾಪಸ್ಸಾಗುತ್ತೆ! ಆದ್ರೆ ನನಗೆ ಆಶ್ಚರ್ಯ ಆಗೋ ವಿಷಯ ಅಂದ್ರೆ ನಾಯಿಗೆ ಯಾಕೆ ಬರಿ ಇಂಗ್ಲಿಶೇ ಅರ್ಥ ಆಗೋದು ಅಂತ!? ನಾಯಿಗೆ ಬಾರೊ ಇಲ್ಲಿ ಅಂತ ಕನ್ನಡದಲ್ಲಿ ಕರಿಯೊದು ತುಂಬ ಕಡಿಮೆ. ನಮ್ಮ ಹಳ್ಳಿಗಳಲ್ಲಿ ಕರೀತಾರೆ. ನಮ್ಮ ಊರಲ್ಲಿ ಒಬ್ಬ ಸಾವಜಿ ಇದ್ದ. ಅವನದೊಂದು ಹೋಟೆಲ್ಲು. ಅವ್ನ ಬಳಿ ಒಂದು ಭಯಂಕರವಾದ ನಾಯಿ ಇತ್ತು. ಅದನ್ನು ಬೆಳಿಗ್ಗೆ ಕಟ್ಟಿರುತ್ತಿದ್ದನಾದರೂ ನಮಗೋ ಭಯ. ಯಾಕಂದರೆ ಅದು ಒಮ್ಮೆ ಬಾಯಿ ಹಾಕಿದರೆ ನನ್ನ ಇಡೀ ಕಾಲನ್ನೆ ತಿಂದು ತೇಗಿಬಿಡುತ್ತಿತ್ತು. ಆತ ಮಾತ್ರ ತನ್ನ ನಾಯಿಯನ್ನು ಸ್ವಂತ ಮಗನ ಥರ ನೊಡಿಕೊಳ್ಳುತ್ತಿದ್ದ. ನಾವು ಹೆದರೋದ ನೋಡಿ ಆತ ನಗುತ್ತಿದ್ದ. "ಅವಾ ಏನು ಮಾಡಂಗಿಲ್ಲ ಬರ್ರೀ ಸರ್ರ... " ಅನ್ನುತ್ತಲೇ "ಲೇ ರಾಜಾ ಸುಮ್ಕಿರಲೆ ಕಳ್ಳ ಸೂ... ಮಗನೆ" ಅಂತ ಬಯ್ತಿದ್ದ. ನಮಗೋ ನಗು!
ನನಗೆ ಮೊದಲಿನಿಂದಲೂ ನಾಯಿ ಕಂಡರೆ ಅಷ್ಟಕ್ಕಷ್ಟೆ; ಮತ್ತೆ ನಾಯಿಗಳಿಗೂ ನನ್ನನ್ನ ಕಂಡರೆ ಅಷ್ಟೆ ಪಂಚಪ್ರಾಣ! ಈಗಲೂ ಅಷ್ಟೆ, ನಾನು ನಾಯಿವಂತರ (ಅಲಿಯಾಸ್ ನಾಯಿ ಸಾಕಿದವರು ಅಥವಾ ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ ಹಾಕಿದವರು) ಮನೆಗೆ ಹೋಗುವುದು ತೀರಾ ಅಪರೂಪ. ಅಥವ ಅವರೂ ನನ್ನಂಥವರನ್ನು ತಪ್ಪಿಸಲೆಂದೆ ನಾಯಿ ಸಾಕುವರೋ ಗೊತ್ತಿಲ್ಲ. ಇರಲಿ.. ವಿಷಯ ಹೀಗಿರುವಾಗ ಒಂದು ಸಲ ಎನಾಯ್ತು ಅಂದ್ರೆ...
ನಮ್ಮ ಪಕ್ಕದ ಮನೆಗೆ ಹೊಸದಾಗಿ ಜೋಡಿಯೊಂದು ವಾಸವಾಗಲಿಕ್ಕೆ ಬಂದರು. ಇಬ್ಬರೇ ಬಂದರಾ? ಇಲ್ಲ ಜೊತೆಗೊಂದು ನಾಯಿಯನ್ನು ಕರೆ ತಂದರು., ಆ ಜೋಡಿ ಮನೆಲಿರುವುದೇ ಅಪರೂಪ. ಇಬ್ಬರಿಗೂ ರಾತ್ರಿ ಪಾಳಿ ಕೆಲಸ. ದಿನವೆಲ್ಲಾ ನಿದ್ದೆ, ರಾತ್ರಿಯೆಲ್ಲ ಕೆಲಸ. ಅದೇ ಅಲ್ಲವೇ ಈಗಿನ ಬಹಳಷ್ಟು ಯುವ ಜನತೆ ಮಾಡ್ತಿರೊದು! ಅವರಿಬ್ಬರ ಊಟವಂತು ಹೆಚ್ಚು ಕಡಿಮೆ ಹೊರಗೆಯೇ. ಅಡಿಗೆ ಮಡುತ್ತಿರವೆಂದಲ್ಲ, ಮಾಡುತ್ತಿದ್ದರು.. ಮುದ್ದಿನ ನಾಯಿಗೊಸ್ಕರ. ದಿನವೆಲ್ಲಾ ತೆಪ್ಪಗೆ ಬಿದ್ದಿರುತ್ತಿದ್ದ ಆ ನಾಯಿ, ರಾತ್ರಿ ಮಾತ್ರ ಹೋ ಅಂತ ಕಿರುಚುತ್ತಿತ್ತು (ಪಾಪ ಅದರದು ರಾತ್ರಿ ಪಾಳಿ ಕೆಲಸವಲ್ವೆ!). ಆದರೆ ನಮ್ಮದು ನಾಯಿ ಪಾಡು; ರಾತ್ರಿಯೂ ನಿದ್ದೆ ಇಲ್ಲ ಆದರೆ ಬೆಳಿಗ್ಗೆ ನಿದ್ದೆ ಮಾಡುವಂತಿಲ್ಲ. ಅದರ ಜೊತೆಗೆ ಇನ್ನೂ ತುಂಬಾ ಸಮಸ್ಸೆಗಳು ಶುರುವಾದವು. ನಮಗೆ ಹೊರಗೆ ಅಡ್ಡಾಡುವುದೇ ದುಸ್ತರವಾಯಿತು. ನಾನು ಅತ್ತಿತ್ತ ನೋಡಿಕೊಂಡು ಅವರ ಮನೆ ದಾಟುವ ಪರಿಸ್ಥಿತಿ, ಅದನ್ನು ನೋಡಿ ಅವರು ನಗುವರೇನೋ ಎಂದು ಒಳಗೊಳಗೆ ಅಳುಕು!
ನಾನಂತೂ ನಿರ್ಧಾರ ಮಾಡಿಬಿಟ್ಟೆ. ಅವರಿಗೆ ಹೋಗಿ ಹೇಳುವುದೆಂದು. ಏನಂತ ಹೇಳುವುದು? ಗೊತ್ತಿಲ್ಲ! ಒಟ್ಟಿನಲ್ಲಿ ನಾನು ಅವನ ಭೇಟಿಯಾಗುವ ನಿರ್ಧಾರ ಮಾಡಿಯಾಗಿತ್ತು. ಆದರೆ ಅವರ ಮನೆಗೆ ಹೋಗುವುದೆ ಒಂದು ದೊಡ್ಡ ಸಮಸ್ಯೆ. ಮನೆಗೆ ಹೋಗಿ ಭೇಟಿಯಾಗುವುದೆಂದರೆ ಅವರ ನಾಯಿ ಇದ್ದೇ ಇರುತ್ತದೆ. ಅವರು ಹೊರಗೆ ಎಲ್ಲಾದರೂ ಕಾಣುವರೋ ಎಂದರೆ, ಅವರು ಕಾಣುವುದೆ ಅಪರೂಪ. ಆ ಪುಣ್ಯಾತ್ಮ ವಾಕಿಂಗ್ ಹೋಗುವುದು ನಾಯಿ ಜೊತೆಗೆ. ಹೀಗಾಗಿ ನಾನು ಮನೆ ಯಜಮಾನನನ್ನು ಭೇಟಿಯಾಗುವುದೇ ಕಷ್ಟ ಸಾಧ್ಯವಾಗಿ ಹೊಯಿತು. ನಾನು ಅವನಿಗಾಗಿ ಹೊಂಚು ಹಾಕಿ ಕುಳಿತಿದ್ದೆ. ಆ ದಿನ ಬಂದೇ ಬಿಟ್ಟಿತು! ಆತ ಒಬ್ಬನೇ ನಿಂತಿದ್ದು ಕಾಣಿಸಿತು. ಆದರೂ, ಹತ್ತಿರದಲ್ಲಿ ಎಲ್ಲಾದರೂ ನಾಯಿ ಇರಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ನಾನೂ ಎಲ್ಲ ದಿಕ್ಕಿನಲ್ಲು ಒಂದು ಕಣ್ಣು ಹಾಯಿಸಿದೆ. ಎಲ್ಲೂ ಅದರ ಇರುವು ಕಾಣಲಿಲ್ಲ. ಯಾಕೆಂದರೆ ಅಲ್ಲೆ ಪಕ್ಕದಲ್ಲೆ ಇರುವ ಖಾಲಿ ಸೈಟು ಅದಕ್ಕೆ ಪಂಚ ಪ್ರಾಣ. ಅದು ಹೊರಗೆ ಬಂದ ತಕ್ಷಣ ಅಲ್ಲೆ ಬಹಿರ್ದೆಶೆಗೆ ಹೋಗೋದು. ಅಲ್ಲೆಲ್ಲಾದರೂ ಅಡ್ಡಡಿಕೊಂಡಿದೆಯೊ ಅಂತ ನೋಡಿದೆ. ಸರಿ, ಅವನಿರುವ ಕಡೆಗೆ ಧೈರ್ಯದಿಂದ ಮುನ್ನುಗ್ಗಿದೆ. ಅರೇ ಇದೇನಿದು? ಅವ ಒಬ್ಬನೆ ತನ್ನಷ್ಟಕ್ಕೆ ತಾನೇ ಮಾತಾಡ್ತಿದ್ದ! ನಾಯಿ ಜೊತೆ ಸಂಭಾಷಿಸಿ ಈ ತರಹ ರೂಡಿಯಾಯ್ತೆ ಪಾಪ, ಅನ್ಕೊತಿದ್ದ ಹಾಗೆ ಸ್ವಲ್ಪ ಹತ್ತಿರದಿಂದ ಗಮನಿಸಿ ನೋಡ್ದಾಗ, ಓಲೆ ತರಹ ಕಿವಿಗೆ ಬ್ಲೂ ಟೂಥ್ ಹೆಡ್ ಸೆಟ್ ಹಾಕಿದ್ದು ಕಾಣಿಸ್ತು. ಫೋನಲ್ಲಿ ಮಾತಾಡ್ತಿದ್ದ ಪಾಪ!. ಈಗಿನ ತಾಂತ್ರಿಕ ಯುಗದಲ್ಲಿ ಯಾರು ಎನು ಮಾಡ್ತಿರ್ತಾರೆ ಅಂತ ಹೇಳೊದು ತುಂಬ ಕಷ್ಟ. ಇರಲಿ, ಹಾಗೆ ಸ್ವಲ್ಪ ಹೊತ್ತು ಕಾಯ್ದೆ. ಆಸಾಮಿ ಕೊರಿಯೊದು ಮುಗಿಸೊ ಲಕ್ಷಣ ಕಾಣ್ತಿಲ್ಲ. ನನಗೆ ಅಷ್ಟರಲ್ಲೆ ನಾಯಿ ಬಂದ್ಬಿಟ್ರೆ ಅಂತ ಭಯ. ಅಂತೂ ಸ್ವಲ್ಪ ಹೊತ್ತಿಗೆ ಮುಗಿಸಿದ. ನಾನು ಪರಿಚಯದ ನಗೆ ನಕ್ಕೆ. ಅದಕ್ಕವನು ನಗಲಿಲ್ಲ ಹುಬ್ಬೇರಿಸಿ ಏನು ಎಂಬಂತೆ ನೋಡಿದ! ಅವನು ನನಗೆ ಗೊತ್ತು ಆದರೆ ಅವನಿಗೆ ನಾನು ಗೊತ್ತಿಲ್ಲವಲ್ಲ. ಹಾಳಾಗಿ ಹೊಗಲಿ, ನನಗೇನು ಅವನ ಜೊತೆ ದೋಸ್ತಿ ಮಾಡೊದಿದೆಯೆ? "ನಾನು ನಿಮ್ಮ ಪಕ್ಕದ ಮನೆಲಿದ್ದೀನಿ" ಅಂದೆ. "ಅದಕ್ಕೇನಿವಾಗ?" ಅನ್ನುವಂತಿತ್ತು ಅವನ ನೋಟ. ನಾನೇ ಮುಂದುವರಿಸಿ, "ನಿಮ್ಮ ನಾಯಿಯಿಂದ ತುಂಬಾ ದಿಸ್ಟರ್ಬ್ ಆಗ್ತಿದೆ. ರಾತ್ರಿಯೆಲ್ಲ ಬೊಗಳತ್ತೆ, ನಮಗೆ ನಿದ್ದೆನೇ ಇಲ್ಲ..." ಅಂತ ಬಡ ಬಡಿಸಿದೆ. ಅವನಿಗೆ ಕೋಪ ಬಂತು ಅಂತ ಕಾಣುತ್ತೆ. ಬರದೆ ಇರುತ್ತದೆಯೆ ಮತ್ತೆ? "ನಾಯಿ ಅಂದ್ಮೇಲೆ ಬೊಗಳೊದೆ ಅಲ್ವ?!" ಅಂದ. ಅರೆ ನನಗಿದು ಗೊತ್ತೆ ಇರಲಿಲ್ಲ! ಈಗ ನನಗೂ ಕೋಪ ಬಂತು. ನಾನು ಕಂಪ್ಲೇಂಟ ಮಾಡ್ತೇನೆ ಅಂದೆ! ಅದಕ್ಕೇನು ಆತ ಜಗ್ಗೊ ತರ ಕಾಣಲಿಲ್ಲ. ಎಲ್ಲ ವಾದ ವಿವಾದಗಳು ಆದರೂ ಕೊನೆಗೂ ಒಂದು ಒಪ್ಪಂದಕ್ಕೆ ಬರೋ ಲಕ್ಷಣಗಳು ಕಾಣಲಿಲ್ಲ. ನಾನು ಹ್ಯಾಪು ಮೋರೆಯೊಂದಿಗೆ ಮನೆಗೆ ಬಂದೆ.
ಇದಕ್ಕೇನು ಪರಿಹಾರ ಅಂತ ರಾತ್ರಿಯೆಲ್ಲ ಯೋಚಿಸಿದೆ. ಬೇರೆ ಮನೆ ನೋಡಲೆ? ಆದರೆ ಅದು ಶಾಶ್ವತ ಪರಿಹಾರವಲ್ಲ. ಬೆಳಿಗ್ಗೆ ಹೊತ್ತಿಗೆ ಒಂದು ನಿರ್ಧರಕ್ಕೆ ಬಂದಿದ್ದೆ! ಸ್ನಾನ ಮುಗಿಸಿ ಲಗು ಬಗೆಯಲ್ಲಿ ತಿಂಡಿ ಮುಗಿಸಿ ಹೊರಟೆ. ಹೆಂಡತಿ ಕೇಳಿದ್ಲು "ಎಲ್ಲಿಗೆ ಹೋಗ್ತಿದ್ದಿರ?" ಅಂತ. "ಕಾದು ನೋಡು, ಸಂಜೆಗೆ ಒಬ್ರನ್ನ ಮನೆಗೆ ಕರ್ಕೊಂಡು ಬರ್ತೇನೆ" ಅಂದೆ...
ಸಂಜೆ ಮನೆಗೆ ಬಂದೆ, ಜೊತೆಗೊಂದು "ನಾಯಿಯನ್ನು" ಕರ್ಕೊಂಡು ಬಂದೆ. ಹೀಗೆ ನಾನು ಕೂಡ "ನಾಯಿವಂತನಾದೆ"! ಬೆಳಿಗ್ಗೆ ಅದರ ಜೊತೆಗೆ ವಾಕಿಂಗು ಹೋಗ್ತೇನೆ. ಅದರ ನೆಪದಿಂದಾದರೂ ವಾಕಿಂಗ್ ಮಾಡ್ತಾನೆ ಅಂತ ನನ್ನ ಹೆಂಡತಿಗೂ ಖುಷಿ! ಅದಕ್ಕೆ ನಾಮಕರಣವೂ ಆಗಿದೆ. ನನ್ನ ಬಾಸ್ ಹೆಸರನ್ನೆ ಅದಕ್ಕಿಟ್ಟಿದ್ದೇನೆ. ಪಕ್ಕದ ಮನೆ ನಾಯಿ ಬೊಗಳಿದಾಗೆಲ್ಲ ನಮ್ಮ "ಬಾಸ್" ಕೂಗ್ತಾನೆ. ಅದೊಂಥರ ಜುಗಲ್ ಬಂದಿ. ಮನೆಗೆ ಬರುವವರ ಸಂಖೆ ಗಣನೀಯವಾಗಿ ಇಳಿದಿದೆ. ಹೆಂಡತಿ ತವರಿಗೆ ಹೋಗೋಣವೆಂದರೆ, ನಾಯಿಯ ನೆಪ ಹೇಳಿ ನಾನಿಲ್ಲೆ ಉಳಿದುಕೊಳ್ಳುತ್ತೇನೆ. ಈಗ ಆರಾಮವಾಗಿ ನಿದ್ದೆ ಮಾಡುತ್ತೆನೆ. ನಾಯಿ ಬೊಗಳಿಲ್ಲ ಅಂದ್ರೆ ನಿದ್ದೆಯೆ ಬರದಂಥ ಪರಿಸ್ಥಿತಿ ಈಗ! ಹೊರಗೆ "ನಾಯಿ ಇದೆ.." ಬೋರ್ಡು ನೇತಾಡ್ತಿದೆ. ಬಾಸ್ ಗೆ ಕನ್ನಡವನ್ನು ಕಲಿಸಿದ್ದೇನೆ. ಬಾಸ್ ಕುತ್ಗೊ ಅಂದ್ರೆ ಕುತ್ಗೊಳ್ಳತ್ತೆ ನಿಂತ್ಗೊ ಅಂದ್ರೆ ನಿಂತ್ಗೊಳತ್ತೆ (ನಮ್ಮ ಆಫಿಸ್ ಬಾಸ್ ಗಳೆಲ್ಲ ಹೀಗೆ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ)...
ಅಂತೂ, ನಾಯಿ ಸಾಕೋದರಿಂದ ಇಷ್ಟೆಲ್ಲ ಅನುಕೂಲಗಳಿವೆ ಅಂತ ನನಗೆ ದೇವರಾಣೆಗೂ ಗೊತ್ತಿರಲಿಲ್ಲ ಬಿಡಿ!

Saturday, January 19, 2008

"ಶೌಚ"ನೀಯ ಕತೆ

ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.
ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು. ವಿಪರ್ಯಾಸವೆಂದರೆ, ಅದೊಂದು ಕುಗ್ರಾಮ, ಆದರೂ ಅದರ ಹೆಸರು ಮಾತ್ರ ದೊಡ್ಡೂರು! ಬಹುಶಃ ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿ ಇದೇ ದೊಡ್ಡ ಊರಾಗಿದ್ದಿರಬಹುದು, ಇರಲಿ. ನಾನು ಅಲ್ಲಿಗೆ ಹೊಗುತ್ತಿದ್ದುದೇ ಅವಲಕ್ಕಿ ಆಸೆಗೆ! ಯಾಕೆಂದರೆ, ಹೋದ ತಕ್ಷಣ ಅತ್ತಿಗೆ, ಹಚ್ಚಿದ ಅವಲಕ್ಕಿ ತಿನ್ನಲು ಕೊಡುತ್ತಿದ್ದಳು. ಜೊತೆಗೆ ಕೆನೆ ಕೆನೆ ಮೊಸರು, ಕೇಳಬೆಕೆ? ಓಂದು ರೌಂಡು ಮುಗಿಸಿ ಇನ್ನೊಂದಕ್ಕೆ ಅಣಿಯಾಗುತ್ತಿದ್ದೆ. ಆದರೆ ಅಮ್ಮನ ಮುಖ ಮಾತ್ರ ತಪ್ಪಿಸುತ್ತಿದ್ದೆ. ಯಾಕೆಂದರೆ, ನಾನು ಆ ಪರಿ ತಿನ್ನುವುದು ಅವಳಿಗೆ ಇಷ್ಟವಿರಲಿಲ್ಲ. ಈಗ ಅದು ನನ್ನ ಹೆಂಡತಿಗೆ ಇಷ್ಟವಿಲ್ಲ. ಗಂಡಸಿನ ಪರಿಸ್ಠಿತಿಯೇ ಹಾಗೆ, ಚಿಕ್ಕವನಿದ್ದಾಗ ಅಮ್ಮನಿಗೆ ಹೆದರಬೇಕು; ದೊಡ್ಡವನಾದಾಗ ಹೆಂಡತಿಗೆ! ಆದರೆ ಒಂದು ಮಾತ್ರ ನಿಜ, ನಾನು ಆ ಪರಿಯಾಗಿ ತಿಂದ ಮೇಲೆ ಏನಾಗುವುದೆಂದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. (ಈಗ ಅದು ನನ್ನ ಹೆಂಡತಿಗೂ ಗೊತ್ತಿದೆ!) ನನಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು ಆದರೂ ಆಸೆ! ಅವಲಕ್ಕಿ ಅಂದ ಮೇಲೆ ಒಂದೇ ರೌಂಡು ತಿನ್ನುವುದೆ? ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಭಂಡ ಧೈರ್ಯ. ಶುರುವಾಯ್ತು ನೋಡಿ, ಹೊಟ್ಟೆಯಲ್ಲಿ, ಗಡ ಗಡ ಶಬ್ದ! ಜೊತೆಗೆ ನಡುಕ ಕೂಡ! ಯಾಕೆಂದರೆ, ದೊಡ್ಡೂರಿನಲ್ಲಿದ್ದುದೊಂದು ಅದ್ಭುತವಾದ ಶೌಚಾಲಯ! ಅದನ್ನು ನೆನೆಸಿಕೊಂಡರೆನೇ ಭಯವಾಗುತ್ತಿತ್ತು. ಅದು ಇದ್ದುದೇ ಹಾಗೆ. ಹಳೇ ಕಾಲದ ಭೂತ ಬಂಗ್ಲೇ ನೆನಪಿಸುವಂತಹ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳು. ಮೇಲ್ಗಡೆ ಸೂರಂತೂ ಇಲ್ಲವೇ ಇಲ್ಲ. ಮೇಲಿನಿಂದ ಹಕ್ಕಿಗಳು ಹಿಕ್ಕಿ ಹಾಕಿದರೆ, ಒಳಗೆ ಕುಳಿತವರ ಮೇಲೇ ಡ್ಯೆರೆಕ್ಟಾಗಿ ಬೀಳುತ್ತಿತ್ತು. ಕಟ್ಟಿಗೆಯ ಬಾಗಿಲುಗಳು. ಸ್ವಲ್ಪ ಕೂಲಂಕುಷ್ವವಾಗಿ ವೀಕ್ಷಿಸಿದರೆ ,ಒಳಗೆ ಕುಳಿತವರು ಯಾರು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು! ಇದೆಲ್ಲದರ ಹೊರತಾಗಿ ಅದು ಇದ್ದುದು ಮನೆಯಿಂದ ಸ್ವಲ್ಪ ದೂರದಲ್ಲಿ. ಆದ್ದರಿಂದ, ನಾನೊಬ್ಬನೆ ಅಲ್ಲಿಗೆ ಹೋಗುವ ಧೈರ್ಯ ಆಗ ನನ್ನಲ್ಲಿರುತ್ತಿರಲಿಲ್ಲ. ಅಂತೂ ಹರ ಸಾಹಸ ಮಾಡಿ, ಉದರ ಬೇನೆಯನ್ನು ಪರಿಹರಿಸಿಕೊಂಡು ಬರುತ್ತಿದ್ದೆ. ಆಮೇಲೆ ಅಮ್ಮನಿಂದ ಭರ್ತಿ ಬೈಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಕೆಳಿದ್ಯಾ, ಆ ಪರಿ ತಿನ್ನಬ್ಯಾಡಾ ಅಂದ್ರ! ಬೊರೊಬ್ಬರಿ ಆತು, ಹಿಂಗ ಆಗಬೇಕು ನಿನಗಅಂತ ಒಂದೇ ಸಮನೆ ಬೈಯುತ್ತಿದ್ದಳು. ನಾನು ಇನ್ನು ಮೇಲೆ ಅವಲಕ್ಕಿ ತಿನ್ನಬಾರದು ಅಂತ ನಿರ್ಧಾರ ಮಾಡುತ್ತಿದ್ದೆ. ಈಗಲೂ ಆಗಾಗ ಆ ನಿರ್ಧಾರ ತೆಗೆದುಕೊಳ್ಳುತ್ತಿರುತ್ತೇನೆ!
ಹೀಗೆ ನಾನು ಅನುಭವಿಸಿದ ಸಂಕಟಗಳು ಹಲವಾರು. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ, ಸಂಕಟ ಅನುಭವಿಸಿದ್ದಿದೆ. ಒಂದು ಸಲ ಬಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಬೆಳಿಗ್ಗೆ ೬ ಗಂಟೆಗೆ ಬಸ್ಸು ಮೈಸೂರು ತಲುಪುವ ನಿರೀಕ್ಷೆ ಇತ್ತು. ನನಗೋ ೫ ಗಂಟೆಗೇ ಅವಸರ ಶುರುವಾಯ್ತು. ಹಾಗೂ ಹೀಗು ಮೈಸೂರು ತಲುಪುವವರೆಗೆ ಸಾಕುಬೇಕಾಗಿ ಹೊಯ್ತು. ಆ ವೇಳೆಗೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಿರಬೇಕೆಂದು ಗಮನಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಂತೂ ಬಸ್ಸು ಇಳಿದ ತಕ್ಷಣ ಅವಸರ ಜಾಸ್ತಿ ಆಯ್ತು. ನನ್ನ ಗ್ರಹಚಾರಕ್ಕೆ ಅವತ್ತೇ ಹೊಸವರ್ಷ ಬೇರೆ, ಅಟೋದವರು ಎಷ್ಟು ಕೆಳುತ್ತಾರೊ ಅಷ್ಟು ಕೊಡಬೆಕು! ಚೌಕಾಷಿ ಮಾಡಲು ಅವಕಾಶವೇ ಇಲ್ಲ. ಅದಿರಲಿ, ನನಗದಕ್ಕೆ ಪುರುಸೊತ್ತೂ ಇರಲಿಲ್ಲ ಬಿಡಿ! ಬೇಗ ಲಾಡ್ಜ ಓಂದಕ್ಕೆ ಒಯ್ದು ವಗಿ ಎಂದು ಆಟೊದವನಿಗೆ ಬೇಡಿಕೊಂಡೆ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೆಕು. ಅವನು ಅಲ್ಲೆ ಪಕ್ಕದಲ್ಲೆ ಇದ್ದ ಅದ್ಭುತವಾದ ಲಾಡ್ಜ ಒಂದಕ್ಕೆ ವಯ್ದು ವಗೆದ. ಅವನು ಕೆಳಿದಷ್ಟು ಹಣ ತೆತ್ತು ಲಾಡ್ಜು ಸೇರಿಕೊಂಡು ನಿಟ್ಟುಸಿರಿಟ್ಟೆ! ಆದರೆ ಅದೊಂದು ಕಚಡಾ ಹೋಟೇಲ್ ಆಗಿದ್ದರಿಂದ ಬೇರೆ ಕಡೆಗೆ ಹೋಗಬೆಕಾಯ್ತು. ಹೊಸವರ್ಷದ ಬೋನಸ್! ಅದಕ್ಕೆ ನಾನು ರಾತ್ರಿ ಪ್ರಯಾಣವಿದ್ದರೆ ಊಟವನ್ನೇ ಮಾಡುವುದಿಲ್ಲ!
ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶೌಚಸಮಾಧಿಗೆ ಹೋದರೆಂದರೆ ಹೊರಗೆ ಬರುವುದು ಒಂದೆರಡು ಗಂಟೆಗಳ ಬಳಿಕ. ಅಷ್ಟರವರೆಗೆ ಬೇರೆಯವರ ಗತಿ ಅಧೋಗತಿ! ಅದಕ್ಕೆ ಅಂಥವರು ಮನೆಲಿದ್ದರೆ ಬೇರೆಯವರು, ಬೇಗ ಎದ್ದು ತಮ್ಮ ಕಾರ್ಯ ಮುಗಿಸುವುದು ಒಳ್ಳೆಯದು. ನನ್ನ ಸಂಬಂಧಿಯೊಬ್ಬ ಇದೇ ಜಾತಿಗೆ ಸೇರಿದವನು. ಅವನು ಬೆಳಗಿನ ಪೇಪರ್ ಓದುವುದು ಅಲ್ಲಿಯೇ! ಪೇಪರ್ ಒಂದೇ ಅಲ್ಲ, ಕತೆ, ಕಾದಂಬರಿ ಏನೇ ಆದರೂ ಸರಿ ಅದನ್ನೊಯ್ದು ಶೌಚ ಸಮಾಧಿಯಲ್ಲಿ ಕೂತನೆಂದರೆ ಪೂರ್ತಿ ಕತೆ ಮುಗಿದಾದ ಮೇಲೆಯೇ ಹೊರಗೆ ಬರುವುದು. ಆದರೆ ಆಮೇಲೆ ಪೇಪರಗಳು, ಪುಸ್ತಕಗಳು ಮಾತ್ರ ಬೆರೆಯವರು ಓದುವ ಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲ ಹಸಿ ಹಸಿ! ಆದಕ್ಕೆ ಅವನು ನಮ್ಮ ಮನೆಗೆ ಬರುತ್ತಾನೆಂದರೆ, ನನ್ನ ನೆಚ್ಚಿನ ಪುಸ್ತಕಗಳನ್ನೆಲ್ಲ ಮುಚ್ಚಿ ಇಡುತ್ತೇನೆ.
ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯಂತೂ ತುಂಬಾ ಮೋಜಿನದಾಗಿದೆ. ನಾವು ಮಕ್ಕಳಾಗಿದ್ದಾಗ ಈಗಿನ ತರಹ ಕಂಪ್ಯೂಟರು, ವೀಡಿಯೋ ಗೇಮ್ಸು ಇರಲಿಲ್ಲ ನೋಡಿ. ಆಗೆಲ್ಲ ಚಿನ್ನಿ ದಾಂಡು, ಗೋಲಿ ಇಂಥವೇ ಹಲವು ಬಗೆಯ ಆಟಗಳು. ಆದರೆ ನಮಗೆ ಇಷ್ಟಕ್ಕೆ ತೃಪ್ತಿ ಇರಲಿಲ್ಲ. ಹೊಸಾ ಆಟಗಳನ್ನು ಸೃಷ್ಟಿ ಮಾಡ್ತಿದ್ವಿ. ಒಂದು ಸಲ ಹೀಗೇ ಯಾವುದೊ ಹಬ್ಬ ಇತ್ತು. ಎಲ್ಲರ ಮನೆಯಲ್ಲೂ ಒಳ್ಳೆ ಭೂರೀ ಭೊಜನ! ಊಟವಾದ ಮೇಲೆ ಆಟ! ಎಲ್ಲರೂ ಒಂದೆಡೆಗೆ ಸೇರಿದೆವು. ಇವತ್ತು ಯಾವ ಆಟ ಆಡೊದು? ಇದೇ ನಮ್ಮೆಲ್ಲರ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು, ಆಗ. ಅಷ್ಟರಲ್ಲೆ ನಮ್ಮಲ್ಲೊಬ್ಬ ಭಯಂಕರವಾಗಿ ಶಬ್ದ ಮಾಡಿದ! ಶಬ್ದ ಎಲ್ಲಿಂದ ಬಂತು ಅನ್ನೊದು ನಿಮ್ಮ ಊಹೆಗೆ ಬಿಟ್ಟ ವಿಷಯ! ಆ ಪರಿ ಹಬ್ಬದ ಊಟವಾದ ಮೇಲೆ ಶಬ್ದ ಎಲ್ಲಿಂದ ತಾನೆ ಬರಲು ಸಾಧ್ಯ! ಎಲ್ಲರೂ ಮೂಗು ಮುಚ್ಚಿಕೊಂಡೆವು, ಸಹಿಸಲಸಾಧ್ಯವಾದ ದುರ್ಗಂಧ! ಇಷ್ಟಕ್ಕೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಮತ್ತ್ಯಾವನೋ ಅದೇ ತರಹದ ಶಬ್ದ ಮಾಡಿದ. ಕೇಳಬೇಕೆ, ಅವರಿಬ್ಬರ ಮಧ್ಯೆ ಸ್ಪರ್ಧೆಯೇ ಶುರುವಾಯ್ತು. ಉಳಿದವರೆಲ್ಲ ಇಬ್ಬರಿಗೂ ಹುರಿದುಂಬಿಸಲು ತೊಡಗಿದರು (ಮೂಗು ಮುಚ್ಚಿಕೊಂಡು!). ಹತ್ತು ಆಯಿತು, ಇಪ್ಪತ್ತು ಆಯಿತು, ಊಹುಂ ಇಬ್ಬರಲ್ಲಿ ಯಾರೂ ಸೋಲುವ ಲಕ್ಷಣ ಕಾಣಲಿಲ್ಲ! ಹಾಗೆ ಆಟ ಮುಂದುವರಿಯಿತು. ಸಂಜೆ ಆಗೋಕೆ ಬಂತು. ಇನ್ನೆನು ಆಟದಲ್ಲಿ ಯಾರು ಸೋಲುವರಿಲ್ಲ ಅಂದಾಗ ಇಬ್ಬರಿಗೂ ರಾಜಿ ಮಾಡುವರಿದ್ದೆವು. ಕೊನೆಯದಾಗಿ ಎಂಬಂತೆ ಒಬ್ಬ ಪ್ರಯತ್ನ ನಡೆಸಿದ್ದ. ಅವನ ಪ್ರಯತ್ನ ಸ್ವಲ್ಪ ಜಾಸ್ತಿಯೇ ಅಯ್ತೇನೊ! ಚಣ್ಣದಲ್ಲಿ ಅದರ ಫಲಿತಾಂಶ ಹೊರಬಿತ್ತು. ಮುಂದೆಂದು ಆ ಆಟವನ್ನು ಆಡುವ ಸಾಹಸಕ್ಕೆ ನಾವ್ಯಾರೂ ಹೊಗಲಿಲ್ಲ!
ಈ ತರಹದ ಶಬ್ದ ಮಾಲಿನ್ಯದ (ವಾಯು ಮಾಲಿನ್ಯವೂ ಹೌದು!) ಮೇಲೆ ನಮ್ಮ ಹಿರಿಯರು, ಓಂದು ಶ್ಲೋಕವನ್ನೆ ಸೃಷ್ಟಿ ಮಾಡಿದ್ದಾರೆ!ಭರ್ರಂ ಭುರ್ರಂ ಭಯಂ ನಾಸ್ತಿ!ಟುಸ್ಸಾಕಾರಂ ಘೋರ ಸಂಕಟಂ!ನಿಶ್ಯಬ್ಧಂ ಪ್ರಾಣ ಸಂಕಟಂ!ಈ ಶ್ಲೋಕಕ್ಕೆ ವಿವರಣೆಯ ಅಗತ್ತ್ಯವಿಲ್ಲವೆಂದು ನಂಬಿದ್ದೆನೆ. ಹೀಗೆ ಮೋಜಿನ ಸಂಗತಿಗಳು ಹಲವಾರು. ಸಧ್ಯಕ್ಕಿಷ್ಟು ಸಾಕು ಅನಿಸುತ್ತದೆ. ನೀವೆನಂತೀರಾ?

Tuesday, May 1, 2007

ಕನ್ನಡ ಎಲ್ಲಿದೆ... ಕನ್ನಡ ಎಲ್ಲಿದೆ?

"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್ ಭಾಷೆಯನ್ನು ವಿರೋಧಿಸ್ತಾ ಇಲ್ಲ; ಇಂಗ್ಲಿಷ್ ಮಾತಾಡೋರನ್ನೂ ಅಲ್ಲ. ನಾನು ಹೇಳ್ತಾ ಇರೋದು ಇಂಗ್ಲಿಷ್ ಮಾತಾಡೊ ಸಂದರ್ಭದ ಬಗ್ಗೆ. ನನ್ನ ಒಬ್ನು ಗೆಳೆಯ ಇದ್ದಾನೆ. ಅವ್ನು ಮತ್ತು ಅವನ ಹೆಂಡತಿ ಇಬ್ಬರ ಸಂಭಾಷಣೆ ಯಾವಾಗ್ಲೂ ಇಂಗ್ಲಿಷಲ್ಲೇ! ಮಜಾ ಅಂದ್ರೆ ಅವರಿಬ್ಬರ ಮಾತೃ ಬಾಷೆನೂ ಕನ್ನಡವೇ! ಇಂಥ ಎಷ್ಟೋ ಜನ ಇದ್ದಾರೆ. ಹಾಗೆ ಮಾತಾಡೊದ್ರಲ್ಲಿ ಅವರಿಗೇನೊ ಒಂಥರ ಖುಷಿ. ತಾವು ಶ್ರೇಷ್ಠರು (!) ಅನ್ನುವ ಸಮಾಧಾನ.
ಇಂಗ್ಲಿಷ್ ಬಗೆಗಿನ ಈ ವ್ಯಾಮೋಹ ಇವತ್ತಿನದಲ್ಲ. ಇದು ಬ್ರಿಟಿಷರು ಇಲ್ಲಿ ಬಂದು ತಳ ಊರಿದಾಗಿನಿಂದ ಇದೆ. ಅವರು ಹೋದರು, ಆದರೆ ಇಂಗ್ಲಿಷು ಮಾತ್ರ ಇಲ್ಲಿ ಬೇರು ಬಿಟ್ಟಿತು. ಅದನ್ನು ಮಾತಾಡೊದು ಖಂಡಿತವಾಗಿಯು ತಪ್ಪಲ್ಲ. ಅದು ಅಂತರ್ ರಾಷ್ಟ್ರೀಯ ಭಾಷೆ. ಆದರೆ ಹೆಂಡತಿ, ಮಕ್ಕಳ ಜೊತೆನೂ ಇಂಗ್ಲಿಷೇ ಆಗಬೇಕೆ? ಚೊಕ್ಕವಾಗಿ ಕನ್ನಡದಲ್ಲೇ ಮಾತಾಡಬಾರದೆ? ನಾ ಯಾಕೆ "ಕನ್ನಡಿಗರನ್ನ" ಇಲ್ಲಿ ಎತ್ತಿ ತೋರಸ್ತಾ ಇದಿನಿ ಅಂದ್ರೆ; ಕನ್ನಡಿಗರಲ್ಲೆ ಅಭಿಮಾನ ಶೂನ್ಯತೆ ಜಾಸ್ತಿ ಅನ್ನೊದು ನನ್ನ ಅಭಿಪ್ರಾಯ (ಈ ಅಭಿಪ್ರಾಯ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!) ನಮ್ಮ ಕನ್ನಡ ಇಷ್ಟು ಕುಲೂಷಿತವಾಗಿದೆ ಅಂದ್ರೆ. ಅದಕ್ಕೊಂದು ಉದಾಹರಣೆಯಾಗಿ ಒಂದು ಘಟಣೆ ನಡೆಯಿತು. ನಮ್ಮ ಕಛೇರಿಗೆ ಸ್ಪೇನದಿಂದ ಒಬ್ಬ ಸಹೋದ್ಯೋಗಿ ಬಂದಿದ್ದ. ಅವನನ್ನು ಒಂದು ಕಡೆ ಊಟಕ್ಕೆ ಕರೆದೊಯ್ಯುತ್ತಿದ್ದೆವು. ಎಫ್ ಎಮ್ ರೇಡಿಯೋದಲ್ಲಿ ಒಬ್ಬಳು ತನ್ನ ಸುಮಧುರವಾದ ಕಂಠದಲ್ಲಿ ಅದು ಕನ್ನಡದಲ್ಲಿ (?!) ಎನೋ ಕಥೆ ಶುರು ಮಾಡಿದ್ಲು. ನಿಮಗೆ ಗೊತ್ತಲ್ಲ ಎಫ್ ಎಮ್ ನ ಕನ್ನಡದಲ್ಲಿ ಇಂಗ್ಲಿಷ್ ಶಬ್ಧಗಳೇ ಜಾಸ್ತಿ. ನಮ್ಮ ಸ್ಪೇನ್ ಗೆಳೆಯ ಹೇಳಿದ "ನಿಮ್ಮ ಭಾಷೆ ಹೆಚ್ಚು ಕಡಿಮೆ ಇಂಗ್ಲಿಷ್ ಇದ್ದ ಹಾಗೆ ಇದೆಯಲ್ಲ!" ನಮ್ಮೆಲ್ಲರ ಮುಖ ಇಂಗು ತಿಂದ ಮಂಗನಂತಾಗಿತ್ತು. ಬೇರೆ ದೇಶದವರನ್ನು ಬಿಡಿ, ನಮ್ಮ ಸಹೋದ್ಯೋಗಿಗಳಲ್ಲೇ ಕೆಲವು ಜನ ತಮಿಳರು, ಕೆರಳದವರು ಇದ್ದಾರೆ. ಅವರಿಗೆಲ್ಲ ಕನ್ನಡ ಕಲಿಸುವ ವ್ಯರ್ಥ ಸಾಹಸ ನಾನು ಆಗಾಗ ಮಾಡ್ತಾ ಇರ್ತೀನಿ (ಅವರಾಗೆ ಕನ್ನಡ ಕಲಿಯುವ ಗೋಜಿಗೆ ಅವರೆಂದೂ ಹೋಗೊದಿಲ್ಲ ಬಿಡಿ. ನಾವೇ ಅವರ ಭಾಷೆಯಲ್ಲಿ ನಿಚ್ಛಳವಾಗಿ ಮಾತಾಡಸ್ತಿವಲ್ಲ!) ಅದರಲ್ಲಿ ಒಬ್ಬ "ಕನ್ನಡ ತುಂಬಾ ಸುಲಭ, ನನಗೆ ಕೆಲವು ಶಬ್ಧಗಳು ಗೊತ್ತು ಅಂದ! ನನಗೋ ಖುಷಿ. ಹೇಳಪ್ಪ ಏನೇನು ಗೊತ್ತು ಅಂದೆ. ಆತ ಹೇಳಿದ "ಎಂಜಾಯ್ ಮಾಡಿ!..... ಲಂಚ್ ಆಯ್ತಾ... " ಇಂಥವೆ ಕೆಲವು ಅಣಿ ಮುತ್ತುಗಳು. ಅಲ್ವೆ ಮತ್ತೆ? ಕನ್ನಡದಷ್ಟು ಸುಲಭದ ಭಾಷೆ ಬೇರೆಲ್ಲಾದರೂ ಉಂಟೆ?! ಹೀಗೆ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಕನ್ನಡದ ಅಸ್ತಿತ್ವವೆ ಇಲ್ಲವಾಗುತ್ತೇನೋ ಅನ್ನೋ ಭಯ ಶುರುವಾಗಿದೆ.ಬನ್ನಿ ನಮ್ಮ ಭಾಷೆಯನ್ನ ಉಳಿಸಿಕೊಳ್ಳೋಣ.

Tuesday, April 24, 2007

ಮಾತಾಡು ಮಂಗಣ್ಣಾ!

ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...
ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ, ಗೆಳೆಯರೆಲ್ಲ ಬಿದ್ದು ಬಿದ್ದು ನಕ್ಕರು. ಅವನಿಗೆ ಹುಚ್ಚು ಹಿಡಿದಿರುವುದು ಅವರಿಗೆ ಖಾತ್ರಿಯಾಯ್ತು. ಆದರೆ, ಅವನು ಅಷ್ಟಕ್ಕೆ ಬಿಡಲಿಲ್ಲ. ಬೆಕಾದರೆ ಬೆಟ್ ಕಟ್ಟಿ ಅಂದ. ಆಯ್ತು ಅಂತ ಎಲ್ಲರು ಮಾತಾಡೊ ಮಂಗಣ್ಣನ ಮೇಲೆ ಬೆಟ್ ಕಟ್ಟಿದ್ರು.
ಆಫೀಸು ಮಗಿದ ಕೂಡಲೇ ಎಲ್ರು ಅವನ ಮನೆಗೆ ಹೊಗಿ ಮಂಗಣ್ಣನ್ನ ಮಾತಾದ್ಸೊದು, ಒಂದು ವೇಳೆ ಅದು ಮಾತಾಡಿಲ್ಲ ಅಂದ್ರೆ ಅವ್ರು ಕಟ್ಟಿರೊ ದುಡ್ಡು ಅವನು ವಾಪಸ್ಸು ಕೊಡಬೇಕು ಅಂತ ನಿರ್ಧಾರ ಆಯ್ತು. ಅವ್ರಿಗೆಲ್ಲ ಗೆದ್ದೇ ಗೆಲ್ತಿವಿ ಅಂತ ಗೊತ್ತಿತ್ತು. ಅವನಿಗೂ ಅಷ್ಟೆ!ಎಲ್ರು ಸಂಜೆ ಅವನ ಮನೆಗೆ ಬಂದ್ರು. ಅವನು ಮಂಗಣ್ಣನ ಬಳಿಗೆ ಹೋಗಿ, ಅದಕ್ಕೆ ಎಲ್ಲ ವಿಷಯ ಹೆಳ್ದ. ಮಾತಾಡಿ ನನ್ನ ಮರ್ಯಾದೆ ಉಳಿಸು ಅಂತ ಕೆಳ್ಕೊಂಡ. ಮಂಗಣ್ಣ ಅವನೆಡೆಗೆ ಒಂದು ಸಲ ತುಂಟ ನಗೆಯ ನೋಟ ಬೀರಿತು. ಆದರೆ ಏನೂ ಮಾತಾಡಲೆ ಇಲ್ಲ! ಇವನಿಗೆ ಗಂಟಲು ಆರಿದಂತಾಯಿತು. ನಿನ್ನೆಯೆಲ್ಲಾ ವಟ ವಟನೆ ಮಾತಾಡಿದ ಮಂಗಣ್ಣನಿಗೆ ಈಗೆನಾಯಿತು ಅಂತ ಅವನಿಗಾದರೂ ಹೇಗೆ ಅರ್ಥವಾದೀತು. ಅದರ ಮುಂದೆ ಗೋಗರೆದ, ಕಣ್ಣೀರಿಟ್ಟ. ಊಹುಂ, ಮಂಗಣ್ಣನಿಗೆ ಮಾತ್ರ ಅವನ ಮೇಲೆ ಕರುಣೆ ಬಂದಂತೆ ತೋರಲಿಲ್ಲ. ಒಂದು ಶಬ್ದವನ್ನು ಮಾತಾಡಲಿಲ್ಲ. ಗೆಳೆಯರೆಲ್ಲ ಅವನಿಗೆ ಬುದ್ಧಿ ಹೆಳಿ, ಇನ್ನಾದರು ಇಂಥ ಹುಚ್ಚಾಟ ಮಾಡದಿರುವಂತೆ ಎಚ್ಚರಿಸಿ ಹೊರಟು ಹೊದರು. ತಮ್ಮ ಪಾಲಿನ ಹಣವನ್ನು ಮಾತ್ರ ನೆನಪು ಹಾರದೆ ಇಸಿದುಕೊಂಡು ಹೋದರು.ಇವನಿಗೆ ಹುಚ್ಚು ಹಿಡಿಯೊದೊಂದೆ ಬಾಕಿ. ಕೈಲಿದ್ದ ಹಣಾನೂ ಹೋಯ್ತು. ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಅಷ್ಟರಲ್ಲೆ, ಮಂಗಣ್ಣ ನಿಧಾನವಾಗಿ ಅವನ ಬಳಿ ಬಂತು; ಅವನ ಹೆಗಲ ಮೇಲೆ ಕೈ ಇಟ್ಟು ಹೀಗೆ ಅರುಹಿತು "ಯಾಕೆ, ಬೇಜರಾಯ್ತಾ?". ಅವನಿಗೆ ಕೆಂಡದಂಥ ಕೋಪ ಬಂತು (ಬರದೇ ಇರುತ್ತದೆಯೆ ಮತ್ತೆ?). ಆತ ಕೋಪದಿಂದ ಕೂಗಿದ "ಆಗ್ಲೇ ಇಷ್ಟು ಮಾತಾಡೋಕೆ ಏನಗಿತ್ತು ನಿಂಗೆ ಧಾಡಿ?!". ಮಂಗಣ್ಣ ಅಷ್ಟೇ ಶಾಂತನಾಗಿ ನುಡಿದ "ಅಯ್ಯೊ ಹುಚ್ಹಪ್ಪಾ, ಆಗ ನಾನು ಮಾತಾಡಿದ್ದಿದ್ರೆ ನಿನಗೆ ಪುಟುಗೋಸಿ ಸಾವಿರಾರು ರುಪಾಯಿ ಗೆಲ್ತಿದ್ದೆ. ನಾಳೆ ಮತ್ತೆ ಅವ್ರ ಜೊತೆನೇ ಬೆಟ್ ಕಟ್ಟು ಈ ಸಲ ಲಕ್ಷಾಂತರ ರುಪಾಯಿ ಕಟ್ತಾರೆ. ಆಮೇಲೆ ನಾನು ಮಾತಾಡ್ತಿನಿ". ಅವನಿಗೆ ಅರ್ಥಾ ಆಯ್ತು! ಮರುದಿನ ಗೆಳೆಯರೆದುರು ಮತ್ತೆ ಚಾಲೆಂಜ್ ಮಾಡ್ದ. ಈ ಸಲ ಮಂಗಣ್ಣ ಮಾತಾಡ್ತು. ಆತ ಒಂದು ದಿನದಲ್ಲೆ ಲಕ್ಷಾಧೀಶನಾದ!